ಕನ್ನಡಕ್ಕೊಬ್ಬನೇ ಕೈಲಾಸಂ”* ಎಂಬುವುದು ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಬಹಳ ಪ್ರಸಿದ್ಧದ ಹಾಗೂ ಜನಜನಿತವಾದ ವಿಚಾರವು ಆಗಿರುತ್ತದೆ. ಒಮ್ಮೆ ಕೈಲಾಸಂರ ಆತ್ಮೀಯರೂ, ಅಭಿಮಾನಿಯೂ ಆಗಿದ್ದ ಅ.ನ.ಕೃ ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿಯಲ್ಲಿ ಆರನೆಯ (6) ಸ್ಥಾನದಲ್ಲಿದ್ದಾರೆ ಎಂದು ಹೇಳಿ , ಉಳಿದವರು ಮೊಲಿಯರ್, ಅರಿಸ್ಟೋಫೆನಿಸ್, ವಾಲ್ಟೇರ್, ಸ್ವಿಫ್ಟ್ ಹಾಗೂ ಬರ್ನಾಡ್ ಷಾ ಎಂದು ಬರೆದಿದ್ದರು.
ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ *‘ನಮ್ ಬ್ರಾಹ್ಮಣ್ಕೆ’, ‘ಟೊಳ್ಳುಗಟ್ಟಿ’, ‘ತಾಳೀ ಕಟ್ಟೋಕ್ಕೂಲೀನೇ?’, ‘ಬಂಡ್ವಾಳ್ವಿಲ್ಲದ ಬಡಾಯಿ’, ‘ಹೋಂರೂಲು’* ನಾಟಕಗಳ ಹಲವಾರು ಸನ್ನಿವೇಶಗಳನ್ನು ಉದ್ಘರಿ ಸುತ್ತಿದ್ದರು.
*ಕೈಲಾಸಂ* ಅವರು ಈ ಇಹಲೋಕ ವನ್ನು ಅಗಲಿ ಸರಿಸುಮಾರು 79 ವರ್ಷಗಳು ಗತಿಸಿರುತ್ತದೆ. ಅಂದರೆ , ಇಂದಿನ ವೃದ್ಧರಲ್ಲೂ ಬಹಳಷ್ಟು ಜನರು ಅವರ ಕಾಲದಲ್ಲಿ ಇರಲಿಲ್ಲ. ಹಾಗಿದ್ದರೂ ಕೂಡ ಕೈಲಾಸಂ ಅವರ ಕುರಿತ ಬರಹಗಳು , ಅವರ ವಿಡಂಬನಾತ್ಮಕವಾದ – ಹಾಸ್ಯಮಯ ಪ್ರಸಂಗಗಳು , ಉತ್ಸಾಹವನ್ನು ಉಕ್ಕಿಸುವ ಪದ್ಯದ ಧಾಟಿಗಳು ಇವುಗಳೆಲ್ಲದರಿಂದ ಅವರು ಒಂದು ಪ್ರೀತಿಪಾತ್ರವಾದ ಕಥಾನಕವಾಗಿ ನಮ್ಮಗಳ ನಡುವೆ ಪ್ರಸ್ತುತದಲ್ಲಿಯೂ ಕೂಡ ಉಳಿದಿರುತ್ತಾರೆ.
ಪೌರಾಣಿಕ ನಾಟಕಗಳ ಆವರಣದಲ್ಲಿದ್ದ ಕನ್ನಡ ಜನತೆಗೆ ಸಾಮಾಜಿಕ ಸಮಸ್ಯೆಗಳನ್ನು ರಂಗಮಂಟಪವೇರಿಸಿ ಹೊಸದೊಂದು ಯುಗವನ್ನೇ ಪ್ರಾರಂಭಿಸಿದ ಕೀರ್ತಿಯು ಕೈಲಾಸಂ ಅವರಿಗೆ ಸಲ್ಲತಕ್ಕದ್ದು ಎಂಬುದಂತೂ ನಿರ್ವಿವಾದವಾಗಿರುತ್ತದೆ.
ಪ್ರಥಮ ಬಾರಿಗೆ ಈ ಸಾಮಾಜಿಕ ನಾಟಕಯುಗದ ನಾಂದಿಯಾಗಿ ಅವರು ನೀಡಿದ ಕೊಡುಗೆ *‘ಟೊಳ್ಳು ಗಟ್ಟಿ’* ಆಗಿರುತ್ತದೆ. ಇದರಲ್ಲಿ ಕೈಲಾಸಂ ಜನತೆಗೆ ತಮ್ಮನ್ನು ಪರಿಚಯ ಮಾಡಿಕೊಡುತ್ತಾ “ *ಪ್ರಹಸನ ಪ್ರಪಿತಾಮಹ ಚಂಡ ಪ್ರಚಂಡ ಗುಂಡೂರಾಯ ನಮೋಸ್ತುಮೇ* ” ಎಂದು ಕನ್ನಡಿಯನ್ನು ಹಿಡಿದು ಬಂದು ತಮ್ಮ ಕಾಲಿಗೆ ತಾವೇ ಸಾಷ್ಟಾಂಗವರ್ಪಿಸಿಕೊಂಡರು.
ಅಂದಿನ ನೂಕುನುಗ್ಗಲಿನ ರಂಗಮಂದಿರ ದೊಳಗೆ ಗಡ್ಡಗಳಿಲ್ಲದ, ಗದೆ ಕತ್ತಿಗಳನ್ನೇ ಕಾಣದ , ಕಿರೀಟಾದಿ ಆಭರಣರಹಿತವಾದ ಜನಸಾಮಾನ್ಯರು ಪ್ರವೇಶ ಮಾಡುವುದೆಂದರೇನು ? ಇಂತಹ ಸಮಯದಲ್ಲಿ ಕೈಲಾಸಂ ತಮ್ಮ ಹಾವಾಡಿಗನ ಬುಟ್ಟಿಯಲ್ಲಿ ಕಟ್ಟಿ ತಂದ, ಸಾಮಾನ್ಯ ಮಾನವರಾದ ರಂಗಣ್ಣ, ರಾಮಣ್ಣ, ಅಹೋಬ್ಲು, ನಾಗತ್ತೆ, ಸುಬ್ಬಮ್ಮ, ಪಾತು, ಸಾತು, ಬಾಳು, ನರಸಿಂಹಯ್ಯ, ಪೋಸ್ಟ್ ಮನ್, ಗಡಫ್ ಖಾನ್, ಪೋಲಿಕಿಟ್ಟಿ, ಕುಪ್ಪಣ್ಣ ಇತ್ಯಾದಿ ಮಂದಿಯನ್ನು ಧೈರ್ಯವಾಗಿ ರಂಗಮಂಟಪಕ್ಕೇರಿಸಿದರು. ಈ ಕೈಲಾಸಂ ಪಾತ್ರಗಳ ಮಾತಿನ ಚಕಮಕಿ, ವಿನೋದಪೂರ್ಣ ವಿವಾದಗಳು, ವಿಚಿತ್ರ ಸನ್ನಿವೇಶಗಳು ಜನರನ್ನು ಕಕ್ಕಾ ಬಿಕ್ಕಿಯನ್ನು ಮಾಡಿದವು. ಈ ವಿಚಿತ್ರ ವ್ಯಕ್ತಿಗಳ ನಡೆ ನುಡಿಗಳ ಆಕರ್ಷಣೆಗೆ ಪ್ರೇಕ್ಷಕರು ಮಾರುಹೋದರು. ಕನ್ನಡ ನಾಟಕ ರಂಗಕ್ಕೆ ಹತ್ತಿದ್ದ ಪೌರಾಣಿಕ ತೆವಲು ಬಿಟ್ಟುಹೋಯಿತು. ಸಾಮಾನ್ಯ ಜನರ ದಿನನಿತ್ಯದ ಜೀವನದ ಹಿಂದೆ ಅಡಗಿರುವ ಕಾಪಟ್ಯ, ವಂಚನೆ, ನಟನೆ, ಆಟಾಟೋಪ, ಅಟ್ಟಹಾಸ, ಮೋಸ, ಠಕ್ಕುಗಳನ್ನೆಲ್ಲಾ ಈ ನಾಟಕಗಳು ಬಯಲು ಮಾಡಿದವು. ಇಂತಹ ವೈವಿಧ್ಯಮಯ ಆಕರ್ಷಣೆ ಎದುರಿನಲ್ಲಿ ದೇವದಾನವರ ನಾಟಕೀಯ ಆರ್ಭಟಗಳು ಹುಸಿ ಎನಿಸಿದವು. ಹೀಗೆ ಕನ್ನಡದ ಸಾಮಾಜಿಕ ನಾಟಕಗಳ ಹೊಸ ಯುಗವು ಆರಂಭವಾಯಿತು. ಇದರ ಆದ್ಯ ಪ್ರವರ್ತಕರು *ಶ್ರೀ ತ್ಯಾಗರಾಜ ಪರಮಶಿವ ಐಯ್ಯರ್ ಕೈಲಾಸಂ ( ಟಿ. ಪಿ. ಕೈಲಾಸಂ )* ಆಗಿರುತ್ತಾರೆ.
*ಕೈಲಾಸಂ* ಅವರು ಜನಿಸಿದ್ದು 1884 ರ ಜುಲೈ 29 ರಂದು. ಅವರು ಜಸ್ಟೀಸ್ ಶ್ರೀ ಪರಮಶಿವ ಐಯ್ಯರ್ ಅವರ ಸುಪುತ್ರರು ಆಗಿರುತ್ತಾರೆ. ಇವರ ವಿದ್ಯಾಭ್ಯಾಸವು ಮೈಸೂರು , ಬೆಂಗಳೂರು , ಹಾಸನಗಳಲ್ಲಾಯಿತು. ಕಾಲೇಜು ವಿದ್ಯಾಭ್ಯಾಸ ಮತ್ತು ಪ್ರಶಸ್ತಿ ಪಡೆದುದು ಮದ್ರಾಸಿನಲ್ಲಿ ಆಗಿರುತ್ತದೆ. ಬಾಲ್ಯದಿಂದಲೇ ಕೈಲಾಸಂ ಚಾಣಾಕ್ಷಮತಿ ಎಂದು ಹೆಸರುಗಳಿಸಿದ್ದು ಪರೀಕ್ಷೆಗಳಲ್ಲಿ ‘ಫಸ್ಟ್ ಕ್ಲಾಸು’ಗಳನ್ನೇ ಸಿಗಿದು ಸಿಪ್ಪೆ ಹಾಕಿದ್ದರು. ಕಡೆಗೆ ಭೂಗರ್ಭ ಶಾಸ್ತ್ರದ ಉನ್ನತ ಪದವಿಗಾಗಿ ಲಂಡನ್ನಿನ ರಾಯಲ್ ಕಾಲೇಜಿಗೆ ಸೇರಿ ಅಲ್ಲಿ ಪ್ರಶಸ್ತಿಯನ್ನು ಪಡೆದು ಬಂದರು. ಇಂಗ್ಲೆಂಡಿನಲ್ಲಿದ್ದ ಹಲವು ವರ್ಷಗಳ ಕಾಲದಲ್ಲಿ ಇವರು ಅಲ್ಲಿನ ಸರ್ಕಸ್ ಕೂಟಗಳು , ನೃತ್ಯಮಂದಿರಗಳು , ನಾಟಕ ರಂಗಗಳ ಅಮೂಲಾಗ್ರ ಪರಿಚಯ ಮಾಡಿಕೊಂಡು ಬಂದರು. ಇದಲ್ಲದೆ ಯೂಜಿನ್ ಸಾಂಡೋ ಎಂಬ ವ್ಯಾಯಾಮಪಟುವಿನ ಬಳಿ ‘ಫಿಸಿಕಲ್ ಕಲ್ಚರ್ ’ ಶಿಕ್ಷಣವನ್ನು ಪಡೆದರು. ಇಂಗ್ಲೆಂಡಿನ ಪುಟ್ ಬಾಲ್ ಟೀಮಿನ ಗೊಲಿಯಾಗಿಯೂ ಆಡುತ್ತಿದ್ದರಂತೆ. ಇವರ ಮೈಕಟ್ಟು ಅತ್ಯಂತ ದೃಢವಾದುದೂ ಆಗಿತ್ತು. ಇಷ್ಟಲ್ಲದೆ ಅಲ್ಲಿನ ಸಂಗೀತ ಸಾಹಿತ್ಯಗಳಲ್ಲಿ ಇವರ ಪ್ರೌಢಿಮೆಯು ಅಸದಳವಾಗಿತ್ತು. ಇವರ *‘ ತಿಪ್ಪಾರಳ್ಳಿ ಬಲುದೂರ ’, ‘ ಕೊಳೀಕೆರಂಗಾ ’, ‘ ನೋಡಿದ್ರಾ ನಂ ನಂಜೀನಾವ ’* ಕೇಳಿದರೆ ಪಾಶ್ಚಾತ್ಯರ ಸಂಗೀತದ ಮರ್ಮಗಳ ಐತಿಹ್ಯವು ಇವರಿಗೆ ಎಷ್ಟುಮಟ್ಟಿಗೆ ಕರತಲಾಮಲಕವಾಗಿತ್ತೆಂದು ಊಹಿಸಬಹುದಾಗಿರುತ್ತದೆ. ಹಾಗೆಯೇ , ಇವರ ಇಂಗ್ಲಿಷ್ ಕವನಗಳಲ್ಲೂ, ನಾಟಕಗಳಲ್ಲೂ ಕೂಡ ಕಾಣಬರುವ ಶೈಲಿಯು ಇವರಿಗೆ ಆ ಭಾಷೆಯ ಮೇಲಿದ್ದ ಅಧಿಪತ್ಯವನ್ನು ಶೃತಪಡಿಸುತ್ತದೆ.
ಇವುಗಳೆಲ್ಲಕ್ಕೂ ಹೆಚ್ಚಾಗಿ ಇವರ ವಿನೋದಪ್ರಿಯತೆ ಇವರನ್ನು ಒಬ್ಬ *‘ಜೀನಿಯಸ್’* ರನ್ನಾಗಿ ಮಾಡಿತು ಎನ್ನುವುದರಲ್ಲಿ ಸಂದೇಹವಿರುವುದಿಲ್ಲ. ಇವರ ನಾಟಕದ ಪಾತ್ರಗಳನ್ನೇ ಒತ್ತಟ್ಟಿಗಿಟ್ಟರೂ ಇವರು ಕಟ್ಟುತ್ತಿದ್ದ ಅಣಕವಾಡುಗಳು, ಕುಂಟ್ಪದಿಗಳು, ವಕ್ರೋಕ್ತಿಗಳು, ಚುಟುಕಚಾಟೋಕ್ತಿಗಳು, ವಿಂಡಂಬನಾತ್ಮಕವಾದ ಹಾಸ್ಯಗಳು ಅಸಂಖ್ಯಾತವಾಗಿರುತ್ತವೆ. ಇದನ್ನು ಕೇಳುವ ಜನ ಈಗಲೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಇಡೀ ಜೀವಮಾನ ಅವನ್ನು ಚಪ್ಪರಿಸುವುದು ವಾಡಿಕೆಯು ಆಗಿರುತ್ತದೆ. ಕೈಲಾಸಂ ಎಂದರೆ ಕುಚೋದ್ಯಕ್ಕೆ ಮತ್ತೊಂದು ಹೆಸರು ಎನ್ನುವಷ್ಟು ಇವರ ನುಡಿಗಟ್ಟುಗಳು ಬಹಳ ಪ್ರಸಿದ್ಧವಾಗಿರುತ್ತವೆ.
*ಕೈಲಾಸಂ* ಸ್ವತಃ ವರದಾಚಾರ್ಯರ ನಾಟಕಗಳಲ್ಲಿ ಪಾತ್ರಧಾರಿಯಾಗಿದ್ದುದಲ್ಲದೆ ಆಚಾರ್ಯರು ತೀರಿಕೊಂಡಾಗ ಅವರ ಕಂಪೆನಿ ಯಜಮಾನ್ಯವನ್ನು ವಹಿಸಿಕೊಂಡುದು ಹಲವರಿಗೆ ತಿಳಿಯದು. ಅವರಿಗೆ ಅಂದಿನ ಪೌರಾಣಿಕ ನಾಟಕಗಳ ಸಂಪೂರ್ಣ ಪರಿಚಯವೇ ಅಲ್ಲದೆ ಅಯಾ ಹಾಡುಗಳ ಸರ್ವಲಕ್ಷಣಗಳೂ ಗೊತ್ತಿದ್ದವು. ಸ್ವತಃ ಅವರಿಗೆ ಸಂಗೀತದ ಅನುಭವವೇ ಅಲ್ಲದೆ ಸಂಗೀತ ಲಕ್ಷಣಶಾಸ್ತ್ರದಲ್ಲಿ ಗಾಢವಾದ ಪರಿಚಯವಿತ್ತು. ಶಂಬರನ ಶೃಂಗಾರದಲ್ಲಿ ಅವರು ಹಂಸಧ್ವನಿ, ಶಹನ, ಫರಜ್, ಬೇಗಡೆ, ಕಮಾಚ್ ರಾಗಗಳ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದಾರೆ.
*ಕೈಲಾಸಂ* ಅವರ ನಾಟಕಗಳ ಉದ್ದಕ್ಕೂ ಜನರು ಹೊಟ್ಟೆಯು ಹುಣ್ಣಾಗುವಷ್ಟು ನಗುತ್ತಿದ್ದರೂ ಅದರ ಹಿನ್ನಲೆಯಲ್ಲಿ ನಮ್ಮ ಸಮಾಜದ ಅನಿಷ್ಟ ಪ್ರವೃತ್ತಿಗಳನ್ನು, ಕ್ಷಕಿರಣಗಳನ್ನು ಚೆಲ್ಲಿ ತೋರಿಸಿದ್ದಾರೆ. ದೊಡ್ಡ ರಕ್ತದವರಾಡುವ ಆಂಗ್ಲೋ ಕನ್ನಡ, ಶೆಟ್ರ ತೆಲುಗು, ಐಯ್ಯರಿ, ಐಯ್ಯಂಗಾರ್ಸ್, ಸಂಕೇತಿಗಳಾಡುವ ವಿಧವಿಧ ಶೃತಿಗಳಿರುವ ತಮಿಳು, ಗಡಫ್ ಖಾನರ ಉರ್ದು ಮಿಶ್ರಿತವಾದ ಕನ್ನಡ ಎಷ್ಟೊಂದು ರಸಭರಿತ ಎಂದು ವರ್ಣಿಸಲು ಸಾಧ್ಯವಿಲ್ಲ. ಇದು ಅತ್ಯಂತ ಶಕ್ತಿಯುತ ಎನ್ನಬೇಕು.
*ಕೈಲಾಸಂ* ಭೂಗರ್ಭಶಾಸ್ತ್ರದಲ್ಲಿ ಅತ್ಯುನ್ನತವಾದ ಪದವಿಯನ್ನು ಪಡೆದು ಶ್ರೀಮಂತ ವಂಶದ ಆಸರೆಯು ಇದ್ದು, ಸರ್ಕಾರಿ ಉದ್ಯೋಗ ದೊರಕಿದ್ದರೂ ಸಹಾ ಅದನ್ನೆಲ್ಲಾ ಧಿಕ್ಕರಿಸಿ ತೊರೆದರು. ಅವರಿಗೆ ಲಂಡನ್ನಿನಲ್ಲಿ ವೈಲ್ಡ್, ಷಾ, ಪೆರಿಡನ್, ಇಬ್ಸನ್, ಷೇಕ್ಸ್ಪಿಯರನ ನಾಟಕಗಳನ್ನು ನೋಡಿ ಅಂತೆಯೇ ನಮ್ಮ ನಾಟಕವನ್ನು ಇಂದಿನ ಯುಗಕ್ಕೆ ಕೊಂಡೊಯ್ಯುವುದೆಂತು ಎಂಬ ಚಿಂತೆಯು ಸರ್ವದಾ ಕಾಡುತ್ತಿದ್ದಿತು. ಅದಕ್ಕಾಗಿ ಅವರು ಸರ್ವಸ್ವವನ್ನೂ ತೊರೆದು ಅಲೆಮಾರಿಯಾದರು. “ ಕೂತಲ್ಲಿ ಕಂಪೆನಿ…… ನಿಂತಲ್ಲಿ ನಾಟ್ಕ” ಅವರು ಹೋದಲ್ಲೆಲ್ಲಾ ನಾಟಕವಾಡಿಸುವರು. ಸ್ವತಃ ತಾವೇ 4 ಗಂಟೆಗಳ ಕಾಲ ಏಕಪಾತ್ರಾಭಿನಯವನ್ನು ಮಾಡಿ ಪ್ರದರ್ಶನಗಳನ್ನು ನೀಡುತ್ತಿದ್ದರು. ಅವರಿಗೆ ಕೈ ಬರಹದ ಪ್ರತಿಯು ಅವಶ್ಯವೇ ಇರಲಿಲ್ಲ. ನಾಲ್ಕಾರು ನಾಟಕಗಳನ್ನೂ, ನೂರಾರು ಹಾಡುಗಳನ್ನೂ, ಹಲವಾರು ಅಣಕುವಾಡುಗಳನ್ನೂ ನೀಡಿ, ಜನರನ್ನು ಚುಚ್ಚಿ ನಗಿಸುವರು. ಇವರ ಇಡೀ ಜೀವಮಾನವೇ ಹೀಗೆ ಜರುಗಿತು. ಇವರು ಮಾತನಾಡುವುದನ್ನು ಪೀಡಿಸಿ ಕೆಲವರು ಬರೆದುಕೊಂಡರೆ ಉಂಟು , ಇಲ್ಲದಿದ್ದರೆ ಅದೂ ಇಲ್ಲ. ಇಂದು ಈ ಊರು, ನಾಳೆ ಮತ್ತೊಂದೂರು, ತಂಗುವ ಸ್ಥಳ ಅನಿರ್ದಿಷ್ಟ, ವಿಳಾಸ ನಾಪತ್ತೆ ಈ ರೀತಿಯಲ್ಲಿ ತಿರುಗಿದ ಇವರ ಜೀವನದಲ್ಲಿ ಸುವ್ಯವಸ್ಥಿತ ಕ್ರಮವೆಲ್ಲಿಂದ ಬಂದೀತು ? ಇಷ್ಟಾಗಿಯೂ ಕೂಡ ಸುಮಾರು ಇಪ್ಪತ್ತೈದು ಕನ್ನಡ ನಾಟಕಗಳು , ಆರು ಇಂಗ್ಲಿಷ್ ನಾಟಕಗಳು ಅಚ್ಚಾಗಿರುತ್ತವೆ. ಇದಕ್ಕೆ ಕಾರಣರಾದವರಲ್ಲಿ ಬಿ. ಎಸ್. ರಾಮರಾಯರು , ಕೆ. ಸಂಪದ್ಗಿರಿರಾಯರು , ಜಿ. ಪಿ. ರಾಜರತ್ನಂ , ಕೆ. ವಿ. ಅಯ್ಯರ್ , ಟಿ. ತಾತಾಚಾರ್ಯ ಶರ್ಮ, ಎ. ಸೀತಾರಾಂ ಬಹುಮಟ್ಟಿಗೆ ಕಾರಣರಾದವರು. ಇದು ಕನ್ನಡ ನಾಡಿನ ಸೌಭಾಗ್ಯವು ಆಗಿರುತ್ತದೆ ಎನ್ನಲು ಅಡ್ಡಿಯು ಇಲ್ಲ.
*ಕೈಲಾಸಂ* ಕನ್ನಡದಲ್ಲಿ ದುರಂತ ನಾಟಕಗಳನ್ನೇ ಬರೆಯಲಿಲ್ಲ ಎಂಬುವರನ್ನು ಹೊಡೆದೇಳಿಸುವಂತ ದುರಂತ ನಾಟಕ ‘ ಬಹಿಷ್ಕಾರ ’. ಮದುವೆಯಾಗದ ಕನ್ಯೆ, ಉಳಿದ ಕುಟುಂಬದವರಿಗೆ ಆಚಾರದ ಹೆಸರಿನಲ್ಲಿ ಸಮಾಜವು ಕೊಡುವ ನರಕಯಾತನೆಯ ಕ್ರೌರ್ಯವು ಇದರಲ್ಲಿ ಚಿತ್ರಿತವಾಗಿರುತ್ತದೆ. ಕೈಲಾಸಂರವರಿಗೆ ಇಂಗ್ಲೀಷಿನಲ್ಲಿ ಅದ್ವಿತೀಯ ಪಾಂಡಿತ್ಯವಿತ್ತು. ಷಾ, ವೈಲ್ಡ್, ಇಬ್ಸನ್, ಷೇಕ್ಸ್ಪಿಯರ್ ನಾಟಕಗಳನ್ನು ಇಡೀ ರಾತ್ರಿ ಅಭಿನಯಿಸುವ ಚಟವು ಇವರಿಗಿತ್ತು. ಇವುಗಳ ಜೊತೆಗೆ ಪುರಾಣಗಳ ಅಗಾಧ ಪರಿಚಯದಿಂದಾಗಿ ಅವರು ಪರ್ಪಸ್, ಫುಲ್ಫಿಲ್ಮೆಂಟ್, ಬರ್ಡನ್ , ಕರ್ಣ, ಕೀಚಕ ಇತ್ಯಾದಿ ನಾಟಕಗಳನ್ನು ಸೃಷ್ಟಿಸಿ ಹೋಗಿದ್ದಾರೆ. ಇದಲ್ಲದೆ ಅವರು ಇಂಗ್ಲಿಷಿನಲ್ಲಿಯೂ ಕೂಡ ಹಲವಾರು ಸುಂದರವಾದ ಕವನಗಳನ್ನೂ ರಚಿಸಿದ್ದಾರೆ. ಪೌರಾಣಿಕ ನಾಟಕಗಳಲ್ಲಂತೂ ಮಹಾಭಾರತ , ರಾಮಾಯಣಗಳಲ್ಲಿ ಕಾಣಬಂದ ವ್ಯಕ್ತಿಗಳನ್ನೆತ್ತಿಕೊಂಡು, ಅವರಿಗೆ ವಿನೂತನ ದೃಷ್ಟಿ ಮತ್ತು ಸಂದರ್ಭಗಳನ್ನು ಕಲ್ಪಿಸಿಕೊಂಡು ಚಿರಸ್ಮರಣೀಯ ಪಾತ್ರಗಳನ್ನು ಹೆಣೆದಿದ್ದಾರೆ. ಎಷ್ಟು ಬಗೆಯ ಶೃತಿಗಳು , ತಿರುವುಗಳು , ಮರ್ಮಗಳು , ಕ್ಷಣ ಕ್ಷಣಕ್ಕೂ ಎಷ್ಟು ಬಗೆಯ ಬದಲಾವಣೆಗಳು…..!
ಏಕಲವ್ಯ ಎಂಬ ನಿಷಾಧನು ದ್ರೋಣರು ಅರ್ಜುನನಿಗೆ ಹೇಳಿಕೊಡುತ್ತಿರುವ ಬಿಲ್ಲುವಿದ್ಯೆಯನ್ನು ಮರೆಯಲ್ಲಿ ನಿಂತು ಕಲಿಯುತ್ತಾನೆ. ದ್ರೋಣರು ಅವನ ಮಾನಸಿಕ ಗುರು. ಆದರೇನು ಅವನ ಮುಂದೆ ಅರ್ಜುನನು ಒಬ್ಬ ಪೋರನೆನ್ನಬೇಕು. ಅರ್ಜುನನು ಬಿಲ್ಲುವಿದ್ಯೆಯನ್ನು ಕಲಿಯುವುದು ವಿಶ್ವದ ಅದ್ವಿತೀಯ ಬಿಲ್ಲುಗಾರನಾಗಲೆಂದು. ಇವನ ಧ್ಯೇಯ ಅಹಂಕಾರ ಮಿಶ್ರಿತವಾದುದು. ಇದು ರಾಜಸಗುಣದ ಪ್ರತೀಕ. ಆದರೆ ಏಕಲವ್ಯ ಕಲಿಯುವ ಧ್ಯೇಯ ತನ್ನ ಜಿಂಕೆಗಳನ್ನು ತೋಳಗಳಿಂದ ರಕ್ಷಿಸಲು. ಧ್ಯೇಯವು ಅತ್ಯುಚ್ಚವಾದುದು. ಇದರಿಂದಾಗಿ ಏಕಲವ್ಯನ ಮುಂದೆ ಅರ್ಜುನ ಬೀಳಾಗಿ ಕಾಣುತ್ತಾನೆ. ಬಾಯಿಬಡುಕ, ಬಡಾಯಿಗಾರ, ಸ್ವಾರ್ಥಿ, ಅಹಂಕಾರಿ. ಇವನ ಮಾತುಗಳು ತೂಕವಿಲ್ಲದವು. ತದ್ವಿರುದ್ದವಾಗಿ ಏಕಲವ್ಯನ ವ್ಯಕ್ತಿತ್ವ ಅತ್ಯುನ್ನತವಾಗಿ ಕಂಗೊಳಿಸುತ್ತದೆ. ಕಡೆಗೆ ಬಲಗೈ ಹೆಬ್ಬೆಟ್ಟನ್ನು ಗುರುದಕ್ಷಿಣೆಯಾಗಿತ್ತೂ, ಮತ್ತೆ ಎಡಗೈನಲ್ಲಿ ಈತ ಅದ್ವಿತೀಯ ಬಿಲ್ಲುಗಾರನಾಗುತ್ತಾನೆ. ಗೀತೆಯ ನಿಷ್ಕಾಮಕರ್ಮದ ಶ್ರೇಷ್ಠ ಬೋಧೆಯ ಪ್ರತೀಕ ಈ ನಾಟಕದಲ್ಲಿ ಅಭಿವ್ಯಕ್ತವಾಗಿರುತ್ತದೆ.
ಡಾ . ಸಿ. ಆರ್. ರೆಡ್ಡಿಯವರು ಮನಸಾರೆ ಹೊಗಳಿ ಕೈಲಾಸಂರನ್ನು “ *ಒಂದು ಅತಿ ಶ್ರೇಷ್ಠ ವಜ್ರ* ” ಎಂದು ಬಣ್ಣಿಸಿದುದು ಕರ್ಣ ನಾಟಕದ ಮುನ್ನುಡಿಯಲ್ಲಿರುತ್ತದೆ. ಇಲ್ಲಿ ಕರ್ಣನ ಧೈರ್ಯ, ಸ್ಥೈರ್ಯ, ಶಕ್ತಿಸಾಮರ್ಥ್ಯ, ಸ್ವಾಮಿಭಕ್ತಿ, ನಿಷ್ಠೆ ಹಾಗೂ ಔದಾರ್ಯಗಳು ಆತನನ್ನು ಮುಗಿಲೆತ್ತರಕ್ಕೆ ಏರಿಸಿರುತ್ತವೆ. ಆದರೆ ಎಡೆಬಿಡದೆ ಬೆನ್ನು ಹತ್ತಿದ ವಿಪ್ರಶಾಪ ಆತನನ್ನು ವಿನಾಶಕ್ಕೊಳಗಾಗಿಸುತ್ತದೆ. ಈ ದುರಂತ ನಾಟಕ, ಶ್ರೇಷ್ಠ ಗ್ರೀಕ್ ದುರಂತ ನಾಟಕಕಾರರಾದ ಸೋಫಕ್ಲಿಸ್ ಮತ್ತು ಯುರಿಪಿಡಿಸರನ್ನು ಸ್ಮರಣೆಗೆ ತರುತ್ತದೆ. ಈ ಇಂಗ್ಲಿಷ್ ನಾಟಕಗಳಲ್ಲಿ ಕೈಲಾಸಂ ನಮ್ಮ ವೇದೋಪನಿಷತ್ತು , ಪುರಾಣಗಳಲ್ಲಿರುವ ಸಿದ್ಧಾಂತ , ತತ್ವಗಳನ್ನು ವಿಫುಲವಾಗಿ ಬಳಸಿಕೊಂಡು ಭಾರತೀಯ ಸಂಸ್ಕೃತಿ – ಪರಂಪರೆಯ ಅಂತರಾರ್ಥವನ್ನು ಅತ್ಯಂತ ರಮ್ಯವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ವಿಪರೀತವಾದ ಆಡಂಬರ, ಅಲಂಕಾರಗಳ ಲೇಪವನ್ನೂ ಹೊಂದಿದ್ದರೂ ಕೈಲಾಸಂರಿಗೆ ಇಂಗ್ಲಿಷಿನ ಮೇಲಿದ್ದ ಪ್ರಭುತ್ವವು ಅಗಾಧವಾದದ್ದು ಆಗಿರುತ್ತದೆ ಎನ್ನಬೇಕು.
ಎಂತೂ ಪುರಾಣದ ಮಬ್ಬಿನಲ್ಲಿ ಮೈಮರೆತು, ಸತ್ಯದಿಂದ ದೂರ ಸಾಗಿ ಪುರಾಣಗಳಲ್ಲಿನ ಅದ್ಭುತಗಳನ್ನು ವಿಕೃತಗೊಳಿಸಿ ಇಂದಿನ ಸಮಾಜವನ್ನೇ ರಂಗಮಂಟಪದಿಂದ ದೂರತಳ್ಳಿದ್ದ ಜನತೆಗೆ, ಹೊಸ ಬಗೆಯ ಪ್ರತಿಭಾನ್ವಿತವಾದ, ಪ್ರಚಲಿತ ಸಮಸ್ಯೆಗಳತ್ತ ಕಣ್ಣನ್ನು ಹೊರಳಿಸಿ ಸತ್ಯದರ್ಶನವನ್ನು ಮಾಡಿಸಿದ ಇಂದಿನ ಸಾಮಾಜಿಕ ನಾಟಕದ *‘ಪ್ರಪಿತಾಮಹ’* ರಾದ *ಕೈಲಾಸಂ* ರವರು ಇಡೀ ಜೀವನವನ್ನೇ ಇದಕ್ಕಾಗಿ ತೇದು ಹೋಗಿದ್ದಾರೆ. ಅವರ ಹಾಸ್ಯ ಪ್ರವೃತ್ತಿ, ಕುಚೋದ್ಯ ಕಚಗುಳಿ ಇಡುವ ಅಸಾಧಾರಣ ಪ್ರತಿಭೆ ಮೇಲ್ಮುಖವು ಮಾತ್ರ ಆಗಿರುತ್ತದೆ. ಆದರ ಹಿಂದೆ ಅಡಗಿರುವ ಧಾರುಣ ಪರಿಸ್ಥಿತಿಗೆ ಅವರು ಕನ್ನಡಿಯನ್ನು ಹಿಡಿಯಲು ಮರೆಯಲಿಲ್ಲ. ಅವರ ಪ್ರತಿಭೆಯು ಬಹುಮುಖವಾದುದು , ಅಗಾಧವಾದುದು ಆಗಿರುತ್ತದೆ. ಹಾಗೆಯೇ , *ಕೈಲಾಸಂ* ಎಂದರೆ ” *ಹಾಸ್ಯ – ಹಾಸ್ಯದ ಹೊನಲು – ಹಾಸ್ಯದ ಹೂರಣವು* ” ಆಗಿರುತ್ತದೆ ಎಂಬುವುದು ಯಾವಾಗಲೂ ಕೂಡ ಜನಮಾನಸದಲ್ಲಿ ಬಹಳವಾಗಿ ನೆಲೆಸಿರುತ್ತದೆ.
*ಕೈಲಾಸಂರವರ ” ನಾನು ಕೋಳಿಕೆ ರಂಗಾ …” ಕವಿತೆಯ ಹುಟ್ಟಿನ ಹಿನ್ನೆಲೆ :*
ಒಮ್ಮೆ ಲಂಡನ್ನಿನಲ್ಲಿ ಸಾಹಿತ್ಯ ಸಂಬಂಧಿತ ಚಚೆ೯ಯು ನಡೆದ ಸಂದಭ೯ದಲ್ಲಿ , ಇವರ ಪರಿಚಿತದ ಸ್ನೇಹಿತರೊಬ್ಬರು ಆಂಗ್ಲ ಭಾಷೆಯಲ್ಲಿನ ” *ಕಾನ್ಸ್ಟಾಂಟಿನೋಪಲ್ ( CONSTANTINOPLE )*” ಎಂಬ ಕವಿತೆಯ ಹಾಡನ್ನು ಅದರ ಅಕ್ಷರಗಳ ಸಂಬಂಧಿತ ಸ್ಪೆಲ್ಲಿಂಗ್ ನ ಪ್ರಯೋಗದ ಮೂಲಕ ಉಚ್ಚರಿಸಿದಂತೆ ಹಾಡಿ , ಇದರಂತೆ ಕನ್ನಡದಲ್ಲಿ ಈ ರೀತಿಯಲ್ಲಿ ಸೃಷ್ಟಿಸಲು ಸಾಧ್ಯವೇ ? ಎಂದು ಮೂದಲಿಕೆಯ – ಅವಹೇಳನದ ರೂಪದಲ್ಲಿ ಸವಾಲನ್ನು ಹಾಕಿದಾಗ , ತತಕ್ಷಣವೇ ಕುಶಾಗ್ರಮತಿ ಹಾಗೂ ಚಾಣಾಕ್ಷಮತಿಯ ಟಿ. ಪಿ. ಕೈಲಾಸಂರವರು ಹಿಂದೆ ಮುಂದೆ ನೋಡದೆ ನೇರವಾಗಿ ” *ನಾನು ಕೋಳಿಕೆರಂಗಾ………ಇದನು ಹಾಡಕ್ಕೆ ಬದೆ೯ ಬಾಯ್ಬಿಡೋನು ಬೆಪ್ಪು ನನ್ಮಗ…*” ಈ ಸೃಜನಶೀಲತೆಯ, ಅಪ್ಪಟ ಗ್ರಾಮೀಣ ಸೊಗಡಿನ ಶೈಲಿಯಲ್ಲಿನ ಕವಿತೆಯನ್ನು ಸ್ಥಳದಲ್ಲಿಯೇ ಸೃಷ್ಟಿಸಿ ಅದನ್ನು ಅದರ ಅಕ್ಷರಗಳ ಸಂಬಂಧಿತ ಗುಣಿತಾಕ್ಷರದ ( ಕಾಗುಣಿತ ) ಪ್ರಯೋಗದ ಮೂಲಕ ಉಚ್ಚರಿಸಿ ಹಾಡಿ ತೋರಿಸಿ , ಅದಕ್ಕೆ ತಕ್ಕಂತೆ ಸೂಕ್ತವಾದ ಪ್ರತ್ಯುತ್ತರವನ್ನು ನೀಡಿ ಅವರನ್ನು ತಬ್ಬಿಬ್ಬುಗೊಳಿಸಿ ಹಾಗೂ ನಿಬ್ಬೆರಗಾಗುವಂತೆ ಮಾಡಿ ತೋರಿಸಿ – ಕನ್ನಡದಲ್ಲಿನ ಉತೃಷ್ಟತೆ ಹಾಗೂ ಸಾವ೯ಭೌಮತೆಯನ್ನು ಎತ್ತಿ ತೋರಿಸಿದ ಮಹಾನ್ ಮೇಧಾವಿ , ಮೇರುತನದ ಮಹಾನುಭಾವರು ಆಗಿರುತ್ತಾರೆ.
ತದನಂತರದಲ್ಲಿ ಇದೊಂದು ವಿಶಿಷ್ಟವಾದ ಕವಿತೆಯಾಗಿ ರೂಪುಗೊಂಡು , ಅದು ಕನಾ೯ಟಕದ ಗಾನಕೋಗಿಲೆ ಎಂದು ಕರೆಯಲ್ಪಡುವ ಶ್ರೀ ಪಿ. ಕಾಳಿಂಗರಾವ್ ರವರ ಕಂಠಸಿರಿಯಲ್ಲಿ ಬಹಳ ಪ್ರಸಿದ್ದಿ ಯನ್ನು ಪಡೆದುಕೊಂಡಿರುತ್ತದೆ.
*ಕೈಲಾಸಂ* ರವರು 1945 ರಲ್ಲಿ ಮದರಾಸಿ ನಲ್ಲಿ ನಡೆದ 29ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು 1946 ರ ನವೆಂಬರ್ 23 ರಂದು
ನಿಧನರಾದರು.
ಕನಾ೯ಟಕ ಸಕಾ೯ರದ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ *ಮಿಂಟೋ ಕಣ್ಣಿನ ಆಸ್ಪತ್ರೆಯ* ಎದುರಿನ ಪ್ರವೇಶದ್ವಾರದಲ್ಲಿರುವ ವೃತ್ತ ಮತ್ತು ರಸ್ತೆಗಳಿಗೆ ( ಅವರ ವಾಸಗೃಹ *’ ವೈಟ್ ಹೌಸ್ ‘* ಕೂಡ ಅದರ ಸಮೀಪ – ಪಕ್ಕದಲ್ಲಿಯೇ ಇದ್ದಿರುವುದು ಆಗಿರುತ್ತದೆ ) *ಕನಾ೯ಟಕ ಪ್ರಹಸನ ಪ್ರಪಿತಾಮಹ ಟಿ. ಪಿ. ಕೈಲಾಸಂ* ಎಂದು ಅವರ ಹೆಸರಿನಲ್ಲಿ ಅವುಗಳ *ನಾಮಕರಣವನ್ನು* ಮಾಡಿದಂತೆ , ಅವರಿಗೆ *ಸೂಕ್ತವಾದ ಗೌರವ* ಸೂಚಕವು ಸಲ್ಲಿಕೆಯಾಗಿ , ಅದು ನಿತ್ಯವೂ ಸಂಸ್ಕರಣೆಯಾಗಿ ಇರುತ್ತದೆ.
ಕನ್ನಡದ ಈ ಮಹಾನ್ ಅನಘ್ಯ೯ರತ್ನ – ಅಸಾಧಾರಣ ದೈತ್ಯ ಪ್ರತಿಭೆಗೆ ಅವರ ಜನ್ಮದಿನದ ಸಂಸ್ಮರಣೆಯ ಸುಸಂದರ್ಭದಲ್ಲಿ ಎಲ್ಲರೂ ಕೂಡ ಶಿರಬಾಗೋಣ……!!
*ಸಿರಿಗನ್ನಡಂ ಗೆಲ್ಗೆ – ಸಿರಿಗನ್ನಡಂ ಬಾಳ್ಗೆ - ಕನ್ನಡವೇ ಸತ್ಯ – ಕನ್ನಡವೇ ನಿತ್ಯ – ಕನ್ನಡವೇ ದಿವ್ಯ – ಕನ್ನಡವೇ ಭವ್ಯ*
*ಜೈ ಕನಾ೯ಟಕ……*
———————————————————-
*ಮಾಹಿತಿಗಳ ಸಂಗ್ರಹ ಮತ್ತು ಲೇಖನ : ವಿ. ಪಿ ಆರಾಧ್ಯ – ಮೈಸೂರು*
