ಕನ್ನಡದ ವರಕವಿ ದತ್ತಾತ್ತೇಯ ರಾಮ ಚಂದ್ರ ಬೇಂದ್ರೆ – ಸಂಸ್ಮರಣೆ :
“ ಕುಣಿಯೋಣು ಬಾರಾ ಕುಣಿಯೋಣು ಬಾ”, “ ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.
ಜೀವನ ಗಾಥೆ :
ಬೇಂದ್ರೆ ೧೮೯೬ ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಬೇಂದ್ರೆ ಮತ್ತು ತಾಯಿ ಅಂಬಿಕೆ ( ಅಂಬವ್ವ ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು.
ದ .ರಾ. ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆಯವರು ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ ರಲ್ಲಿ ಬಿ.ಎ. ಪದವಿ ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ. ಎ. ಮಾಡಿಕೊಂಡು ಕೆಲಕಾಲ (೧೯೪೪ -೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು ; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ”ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.
ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ ರ ಅಕ್ಟೋಬರ್ನಲ್ಲಿ ತೀರಿಕೊಂಡ ಅವರು ಕವಿಗಳಿಗೆ , ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.
ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ “ಧಾರವಾಡದ ಅಜ್ಜ” ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.
ಸಾಹಿತ್ಯ ಕೃಷಿ :
ಬೇಂದ್ರೆ ಸ್ಮಾರಕ , ಧಾರವಾಡ
ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ “, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯಲ್ಲಿ ಜ್ಞಾನಪೀಠ ಪ್ರಶಸ್ತಿಯು ಬಂದಿರುತ್ತದೆ. ಕವಿತೆಗಳನ್ನಲ್ಲದೆ ನಾಟಕಗಳು , ಸಂಶೋಧನಾತ್ಮಕ ಲೇಖನಗಳು , ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ ಗೆಳೆಯರ ಗುಂಪು ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.
ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿಯು ಏರಿದ್ದ ಸಮಯ. ಬೇಂದ್ರೆಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು.
ಅವರು ೧೯೫೪ ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.
ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.
ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ” ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.
ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ. ರಾ. ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ ಕನ್ನಡದ ಠಾಗೋರ್ ಎಂದು ಕರೆಯಲಾಗುತ್ತದೆ. “ನಮನ” ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ ೪೪೧ ಹಾಗೂ ಹೃದಯಕ್ಕೆ ೮೮೧ ಎಂದು ಸಂಖ್ಯೆಯನ್ನು ನೀಡಿದ್ದರು.
ವರಕವಿ ಬೇಂದ್ರೆಯವರು ಒಂದು ಅದ್ಭುತ :
ಮಹಾರಾಜ ಕಾಲೇಜಿನಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಬೇಂದ್ರೆ ಅವರು ಮೈಸೂರಿಗೆ ಬಂದಿದ್ದರು. ತೀನಂಶ್ರೀ ಮನೆಯಲ್ಲಿ ಎ.ಎನ್.ಮೂರ್ತಿರಾಯರು, ನಂ.ಶಿವರಾಮ ಶಾಸ್ತ್ರಿ, ತೀನಂಶ್ರೀ ಅವರು ಬೇಂದ್ರೆ ಜೊತೆ ಹರಟೆ ಹೊಡೆಯುತ್ತಿದ್ದರು. ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರು ಅವರ ಬಳಿ ಹೋಗಿ ಕೂತರು. ಇವರನ್ನು ಬೇಂದ್ರೆಗೆ ಪರಿಚಯಿಸಿ, ಈತನಿಗೆ ಕಾವ್ಯದಲ್ಲಿ ವಿಶೇಷ ಆಸಕ್ತಿ ಎಂದು ತೀನಂಶ್ರೀ ಹೇಳಿದರು.
ಬೇಂದ್ರೆ ವಿನೋದವಾಗಿ ಹುಡುಗಾ, ನಿನಗೆ ಕಾವ್ಯದಲ್ಲಿ ಆಸಕ್ತಿ ಈಗಲೂ ಉಳಿದಿದೆಯೋ ಅಥವಾ (ತೀನಂಶ್ರೀಯನ್ನು ತಮ್ಮ ಕೈಕೋಲಿನಿಂದ ತೋರಿಸುತ್ತ) ಈತನ ಭಾಷಾಶಸ್ತ್ರದ ಮಹಾಗ್ನಿಯಲ್ಲಿ ಎಲ್ಲ ದಗ್ಧವಾಗಿ ಹೋಯಿತೋ ಎಂದು ನಕ್ಕರು. ಭಟ್ಟರು ಎಲ್ಲಾದರೂ ಉಂಟೆ. ಅವರು ಕಾವ್ಯಮೀಮಾಂಸೆ ಬರೆದವರು. ಕಾವ್ಯದಲ್ಲಿ ನನಗಿದ್ದ ರುಚಿಯನ್ನು ಬೆಳೆಸಿದವರು ಎಂದರು. ಬೇಂದ್ರೆ ಏನೋಪ್ಪ ನನಗೆ ನಂಬಿಕೆಯಿಲ್ಲ. ಕಾವ್ಯ ಇರಲಿ, ಈತನ ಶಾಸ್ತ್ರಜ್ಞಾನ ಕೂಡ ನನಗೆ ಅನುಮಾನದ್ದಾಗಿ ಕಾಣುತ್ತದೆ. ನೀನೇ ನೋಡು ಕನ್ನಡ ಒಂದು ದ್ರಾವಿಡ ಭಾಷೆ, ತಮಿಳಿಗಿಂತ ಕೊಂಚ ನಂತರ ಬಂದದ್ದು. ಹೀಗೆ ಏನೇನೋ ಈತನ ತರ್ಕ. ಅದು ಎಲ್ಲಾದರೂ ಸಾಧ್ಯವೇ? ಕನ್ನಡ ಎಲ್ಲ ಭಾಷೆಗಿಂತ ಮೊದಲು ಹುಟ್ಟಿದ್ದಲ್ಲವೆ? ಜಗತ್ತಿನ ಮೊದಲು ಭಾಷೆಯೇ ಕನ್ನಡ ಎಂದರು. ಭಟ್ಟರು ತೀನಂಶ್ರೀ ಕಡೆ ನೋಡಿದರು. ಅವರು ನಗುತ್ತ ಗಾಬರಿಯಾಗಬೇಡಿ. ಅದಕ್ಕೆ ಸಮರ್ಥನೆ ಕೊಡಿ ಅನ್ನಿ. ಅದನ್ನೂ ಕೊಡುತ್ತಾರೆ. ಆಗಲೇ ಆಕಾಶ ಮಿಂಚತೊಡಗಿದೆ! ಎಂದರು.
ಬೇಂದ್ರೆ ಓಹೋ ಇಷ್ಟು ಸರಳ ಸತ್ಯಕ್ಕೆ ಸರ್ಮರ್ಥನೆ ಬೇರೆ ಬೇಕಾ? ಆಯಿತು. ಈಗ ನೋಡಿ. ಕನ್ನಡದ ಯಾವುದೇ ಮುಖ್ಯವಾದ ಪದ ತೆಗೆದುಕೊಳ್ಳಿ. ಅದು ಕಕಾರದಿಂದಲೇ ಆರಂಭವಾಗುತ್ತೆ. ಆರಂಭದ ಭಾಷೆ ಕನ್ನಡವೇ ಅನ್ನೋದಕ್ಕೆ ಬೇರೆ ಆಧಾರ ಯಾಕೆ ಬೇಕು ಅಂದು ಬಿಟ್ಟರು!
ಮೂರ್ತಿರಾಯರು ನಗುತ್ತ ಎಲ್ಲಿ ಒಂದಿಷ್ಟು ಉದಾಹರಣೆ ಕೊಡಿಯಪ್ಪ ಎಂದರು. ಬೇಂದ್ರೆ ಕೈಯಿಂದ ತಮ್ಮ ಮೈಯ ಒಂದೊಂದು ಅಂಗ ಮುಟ್ಟಿ ತೋರಿಸುತ್ತ ನೋಡಿ, ಇದು ಕತ್ತು, ಹೌದೆ? ಇದು ಕಂಠ. ಇದು ಕಣ್ಣು, ಇದು ಕಿವಿ. ಇದು ಕೂದಲು. ಇಗೋ ಇದು ಕೈ. ಇದು ಕಾಲು. ಇದು ಕೆನ್ನೆ. ಸಾಕೇ ಎಂದರು. ಮೂರ್ತಿರಾಯರು ಬೇಂದ್ರೆಯವರ ಉಪಾಯ ತಿಳಿದು ಅವರನ್ನು ಕೆಡವಲು ತಮ್ಮ ಸೊಂಟದ ಕಡೆ ಬೆರಳು ಮಾಡಿ ’ಇದು?’ ಎಂದು ಕೇಳಿದರು. ಬೇಂದ್ರೆ ಈಗ ಸಿಕ್ಕಿಬಿದ್ದರು ಅಂತ ಅಂದುಕೊಳ್ಳುತ್ತಿರುವಂತೆಯೇ ಅವರು ತಮ್ಮ ಕೈಕೋಲಿನ ತುದಿಯಿಂದ ಮೂರ್ತಿರಾಯರ ಸೊಂಟ ಚುಚ್ಚುತ್ತ ’ಅದು ಕಟಿ ತಾನೆ’ ಅಂದರು. ಕೂಡಲೆ ಮೂರ್ತಿರಾಯರು ಬೇಂದ್ರೆಯವರ ಪಂಚೆ ಕಡೆ ಬೆರಳು ಮಾಡಿದರು. ಅದು ಕಚ್ಚೆ ಪಂಚೆ ಎಂದು ಉತ್ತರ ಬಂತು! ಮೂರ್ತಿರಾಯರು ತಮ್ಮ ಲುಂಗಿ ಕಡೆ ತೋರಿಸುತ್ತ ಇದಕ್ಕೇನು ಹೇಳುತ್ತೀರಪ್ಪಾ? ಎಂದರೆ ಬೇಂದ್ರೆ ಎಷ್ಟೂ ತಡವರಿಸದೆ ಕೊಳವಿ ಪಂಚೆ ಎಂದುಬಿಟ್ಟರು. ಅಷ್ಟು ಹೊತ್ತಿಗೆ ಕಾಫಿ ಬಂತು. ಬೇಂದ್ರೆ ಅದನ್ನು ತೆಗೆದುಕೊಳ್ಳುತ್ತ ಇಗೋ, ಇದು ಕಪ್ಪು, ಇದು ಕಾಫಿ, ಇದರ ರುಚಿ ಕಹಿ ಎಂದರು. ಅಲ್ಲಿದ್ದವರಿಗೆ ನಗು. ತೀನಂಶ್ರೀ ಅವರು ಮೂರ್ತಿರಾಯರನ್ನು ತಡಯುತ್ತ ಯಾಕಪ್ಪ ಸುಮ್ಮನೆ ಆಯಾಸ ಮಾಡಿಕೊಳ್ಳುತ್ತೀರಿ? ಅವರ ಹತ್ತಿರ ವಾದಮಾಡಿ ಸರಸ್ವತಿ ಗೆದ್ದಾಳೆ? ಎಂದರು. ಭಟ್ಟರ ಕಡೆ ತಿರುಗಿ ನೋಡಿದಿರಾ ಬೇಂದ್ರೆಯನ್ನು? ಶಾಸ್ತ್ರದ ಭರ್ತ್ಸನೆ ಹೇಗಿದೆ? ಹೀಗೆ ವಿನೋದವಾಗಿ ಮಾತನಾಡುವಾಗಲೂ ಅವರು ಕವಿ ಎನ್ನುವುದು ಎಷ್ಟು ಚೆನ್ನಾಗಿ ವ್ಯಕ್ತವಾಗುತ್ತೆ! ಅವರು ಮಾತನ್ನು ಹೇಗೆ ಜಗಿಯುತ್ತಾರೆ, ಬಗೆಯುತ್ತಾರೆ, ತರ್ಕವನ್ನು ಹೇಗೆ ನೆಗೆಯುತ್ತಾರೆ – ಅದೂ ತರ್ಕದ ತೋರಿಕೆಯಲ್ಲೇ! ಈ ಬೇಂದ್ರೆ ನಮ್ಮ ಕಾಲದ ಒಂದು ಅದ್ಭುತ ಎಂದರು ತೀನಂಶ್ರೀ ಅವರು.
ವರಕವಿ ಬೇಂದ್ರೆಯವರು ಗುರುತಿಸಿದ ಕನ್ನಡ ವರ್ಣಮಾಲೆಯಲ್ಲಿ ಗಣಿತ ಸಿದ್ಧಾಂತದಲ್ಲಿನ ಪೈಥಾಗೊರಾಸ್ ನ ಪ್ರಮೇಯ :
ಯಾವುದೇ ಒಂದು ಲಂಬಕೋನ ತ್ರಿಭುಜ ದಲ್ಲಿ ವಿಕಣ೯ದ (ಕಣ೯) ಮೇಲಿನ ವಗ೯ವು ಉಳಿದೆರಡು ಬಾಹುಗಳ ವಗ೯ಗಳ ಮೊತ್ತಕ್ಕೆ ಸಮವಾಗಿರುತ್ತದೆ – ಇದು ಗಣಿತ ಸಿದ್ಧಾಂತ ದಲ್ಲಿನ ಪೈಥಾಗೊರಾಸ್ ನ ಪ್ರಮೇಯವು ಆಗಿರುತ್ತದೆ.
ಕನ್ನಡ ವಣ೯ಮಾಲೆಯನ್ನು ಕ್ರಮಬದ್ಧವಾಗಿ ಅಳವಡಿಸಿ, ಅದನ್ನು ವಗ೯ಗಳ ಸ್ವರೂಪ ದಲ್ಲಿ ಜೋಡಿಸಿದಂತೆ ಬರೆದಾಗ ಇದರ ಸಿದ್ಧಾಂತವನ್ನು ತುಂಬಾ ಸ್ಪಷ್ಟವಾಗಿ ಕಾಣ ಬಹುದಾಗಿರುತ್ತದೆ – ಅಂದರೆ ಸ್ವರಗಳ ಮತ್ತು ಅವಗೀ೯ಯ ವ್ಯಂಜನಗಳ ವಗ೯ಗಳ ಒಟ್ಟು ಮೊತ್ತವು ವಗೀ೯ಯ ವ್ಯಂಜನಗಳ ವಗ೯ದ ಮೊತ್ತಕ್ಕೆ ಸಮ ನಾಗಿರುತ್ತದೆ.
ಇದರ ದೃಷ್ಟಾಂತವನ್ನು ಸೂಚಿತವಾಗಿರುವ ಚಿತ್ರದ ಮೂಲಕವಾಗಿ ಅದನ್ನು ಕಾಣಬಹುದಾಗಿರುತ್ತದೆ –
ಇದೊಂದು ತುಂಬಾ ಉಪಯುಕ್ತ , ಸುಂದರ ಹಾಗೂ ವಿಶಿಷ್ಟವಾದಂತಹ ವಿಷಯವು ಆಗಿರುತ್ತದೆ – ಇದರಿಂದ ವಣ೯ಮಾಲೆ , ಸ್ವರಗಳು , ಅವಗೀ೯ಯ ವ್ಯಂಜನ ಮತ್ತು ವಗೀ೯ಯ ವ್ಯಂಜನಗಳನ್ನು ಅತ್ಯಂತ ಸುಲಭ ಹಾಗೂ ಲೀಲಾಜಾಲವಾಗಿ ಎಲ್ಲರೂ ಕೂಡ ನೆನಪಿನಲ್ಲಿಡಲು ಬಹಳ ಸಹಕಾರಿಯಾಗಿರುತ್ತದೆ.
ಬೇಂದ್ರೆಯವರ ಸಾಹಿತ್ಯ ಕೃಷಿಗಳು :
ಕವನ ಸಂಕಲನಗಳು :
( ಪ್ರಥಮ ಆವೃತ್ತಿಯ ವರ್ಷದೊಂದಿಗೆ ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು
೧೯೨೨ : ಕೃಷ್ಣಾಕುಮಾರಿ;
೧೯೩೨ : ಗರಿ;
೧೯೩೪ : ಮೂರ್ತಿ ಮತ್ತು ಕಾಮಕಸ್ತೂರಿ;
೧೯೩೭ : ಸಖೀಗೀತ;
೧೯೩೮ : ಉಯ್ಯಾಲೆ;
೧೯೩೮ : ನಾದಲೀಲೆ;
೧೯೪೩ : ಮೇಘದೂತ ( ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ )
೧೯೪೬ : ಹಾಡುಪಾಡು;
೧೯೫೧ : ಗಂಗಾವತರಣ;
೧೯೫೬ : ಸೂರ್ಯಪಾನ;
೧೯೫೬ : ಹೃದಯಸಮುದ್ರ;
೧೯೫೬ : ಮುಕ್ತಕಂಠ;
೧೯೫೭ : ಚೈತ್ಯಾಲಯ;
೧೯೫೭ : ಜೀವಲಹರಿ;
೧೯೫೭ : ಅರಳು ಮರಳು;
೧೯೫೮ : ನಮನ;
೧೯೫೯ : ಸಂಚಯ;
೧೯೬೦ : ಉತ್ತರಾಯಣ;
೧೯೬೧ : ಮುಗಿಲಮಲ್ಲಿಗೆ;
೧೯೬೨ : ಯಕ್ಷ ಯಕ್ಷಿ;
೧೯೬೪ : ನಾಕುತಂತಿ;
೧೯೬೬ : ಮರ್ಯಾದೆ;
೧೯೬೮ : ಶ್ರೀಮಾತಾ;
೧೯೬೯ : ಬಾ ಹತ್ತರ;
೧೯೭೦ : ಇದು ನಭೋವಾಣಿ;
೧೯೭೨ : ವಿನಯ;
೧೯೭೩ : ಮತ್ತೆ ಶ್ರಾವಣಾ ಬಂತು;
೧೯೭೭ : ಒಲವೇ ನಮ್ಮ ಬದುಕು;
೧೯೭೮ : ಚತುರೋಕ್ತಿ ಮತ್ತು ಇತರ ಕವಿತೆಗಳು;
೧೯೮೨ : ಪರಾಕಿ;
೧೯೮೨ : ಕಾವ್ಯವೈಖರಿ;
೧೯೮೩ : ತಾ ಲೆಕ್ಕಣಕಿ ತಾ ದೌತಿ;
೧೯೮೩ : ಬಾಲಬೋಧೆ;
೧೯೮೬ : ಚೈತನ್ಯದ ಪೂಜೆ;
೧೯೮೭ : ಪ್ರತಿಬಿಂಬಗಳು;
ವಿಮರ್ಶೆಗಳು :
೧೯೪೦ : ಸಾಹಿತ್ಯ ಸಂಶೋಧನೆ;
೧೯೪೫ : ವಿಚಾರ ಮಂಜರಿ;
೧೯೫೪ : ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
೧೯೫೯ : ಮಹಾರಾಷ್ಟ್ರ ಸಾಹಿತ್ಯ;
ಸಾಯೋ ಆಟ ( ನಾಟಕ )
೧೯೬೨ : ಕಾವ್ಯೋದ್ಯೋಗ;
೧೯೬೮ : ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
೧೯೭೪ : ಸಾಹಿತ್ಯದ ವಿರಾಟ್ ಸ್ವರೂಪ;
೧೯೭೬ : ಕುಮಾರವ್ಯಾಸ ಪುಸ್ತಿಕೆ;
ಪ್ರಶಸ್ತಿ – ಪುರಸ್ಕಾರ – ಬಿರುದುಗಳು :
೧೯೪೩ ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
೧೯೫೮ ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೬೪ ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
೧೯೬೫ ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
೧೯೬೮ ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
೧೯೭೩ ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನ ಪೀಠಪ್ರಶಸ್ತಿ
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.
ಬೇಂದ್ರೆಯವರ ಹೃದಯ ವೈಶಾಲ್ಯತೆ :
ಧಾರವಾಡದಲ್ಲಿ ತಮ್ಮ ಹರಿದ ಚಪ್ಪಲಿಯ ರಿಪೇರಿಗೆ ಹೋದ ಬೇಂದ್ರೆಯವರಿಗೆ ನಿಮ್ಮ ಕಾಲು ಸುಡತಾವ ಅಂತ ಬೇರೆ ಚಪ್ಪಲಿಯನ್ನು ಕೊಟ್ಟ ಆತನಿಗೆ ನನ್ನ ಕಾಲಿನ ಬಗ್ಗೆ ಚಿಂತಿ ಮಾಡ್ತಿ ಅಲ್ಲೋ, ನಿನ್ನ ನೆತ್ತಿ ಸುಡತಾದ್ ಅಂತ ಆತನಿಗೆ ಪ್ರೀತಿಯಿಂದ ತಮ್ಮದೇ ಛತ್ರಿಯನ್ನು ಹಿಡಿದಿದ್ದರಂತೆ ಬೇಂದ್ರೆಯವರು.
ದ.ರಾ. ಬೇಂದ್ರೆಯವರ ಅಂಬಿಕಾತನಯ ದತ್ತ ಕಾವ್ಯನಾಮದ ವೈಶಿಷ್ಟ್ಯತೆ :
ಬೇರೆ ಇತರೆ ಕವಿಗಳು ತಮ್ಮ ಕಾವ್ಯ ನಾಮಗಳಲ್ಲಿ ಬೇರೆ ಹೆಸರನ್ನು ಬಳಸಿ ಕೊಂಡಿರುತ್ತಾರೆ – ಆದರೆ ನಮ್ಮ ವರಕವಿ ಬೇಂದ್ರೆಯವರು ಮಾತ್ರ ತಮ್ಮ ಜನ್ಮದಾತೆಯ ಹೆಸರನ್ನು ಬಳಸಿ ತಮ್ಮ ಕಾವ್ಯನಾಮವನ್ನು ರೂಪಿಸಿರುತ್ತಾರೆ…… ಅಂದರೆ ಅಂಬಿಕಾ ಎಂದರೆ ಅವರ ತಾಯಿಯ ಹೆಸರು – ತನಯ ಎಂದರೆ ಪುತ್ರ – ದತ್ತ ಎಂದರೆ ಅವರ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ…. ಅಂದರೆ ಅಂಬಿಕಾರವರ ತನಯ ( ಪುತ್ರ ) ದತ್ತ ಎಂದಾಗಿರುತ್ತದೆ – ಹಾಗಾಗಿ ಅದು ಅಂಬಿಕಾತನಯದತ್ತ ಎಂಬ ತುಂಬಾ ವಿಶಿಷ್ಟವಾದಂತಹ ಅವರ ಕಾವ್ಯನಾಮವು ಆಗಿರುತ್ತದೆ.
———————————————————-
ಮಾಹಿತಿಗಳ ಸಂಗ್ರಹ ಮತ್ತು ಲೇಖನ : ವಿ. ಪಿ. ಆರಾಧ್ಯ – ಮೈಸೂರು